ಬೆಂಗಳೂರು: ಅಶ್ಲೀಲ ವೀಡಿಯೋ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರು ಅರೆಸ್ಟ್ ಆಗಿ ಒಂದು ತಿಂಗಳು ಕಳೆದಿದೆ. ಪ್ರಜ್ವಲ್ ರೇವಣ್ಣ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶ ನೀಡಿದೆ. ಜುಲೈ 8ರವರೆಗೆ ಪ್ರಜ್ವಲ್ ರೇವಣ್ಣಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇದರ ನಡುವೆ ಪ್ರಜ್ವಲ್ ವಿರುದ್ಧ ದಾಖಲಾದ ಬೇರೆ ಬೇರೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್ ಐಟಿ ಅಧಿಕಾರಿಗಳು ಈಗಾಗಲೇ ಅನೇಕ ಬಾರಿ ಅವರನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದಾರೆ. ಇದೀಗ ಮತ್ತೆ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ ಪ್ರಜ್ವಲ್.
ಇನ್ನು ಪ್ರಜ್ವಲ್ ವಿಚಾರಣೆ ಹಲವು ಭಯಾನಕ ವಿಚಾರಗಳು ಬಯಲಾಗಿವೆ. ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರು ಅನೇಕ ಹೆಣ್ಣಕ್ಕಳೊಂದಿಗೆ ಲೈಂಗಿಕ ಸಂಪರ್ಕ ನಡೆಸಿದ್ದರಿಂದ ಅವರಿಗೆ ಭಯ ಕಾಡುತ್ತಿತ್ತು ಅನ್ನೋದು ಗೊತ್ತಾಗಿದೆ. ಹಾಗಾಗಿ ಪ್ರತೀ ನಾಲ್ಕು ತಿಂಗಳಿಗೊಮ್ಮೆ ಎಚ್ಐವಿ ಪರೀಕ್ಷೆಗೆ ಮಾಡಿಸಿಕೊಳ್ಳುತ್ತಿದ್ದರು ಅನ್ನೋದು ಗೊತ್ತಾಗಿದೆ.
ಇದು ಪ್ರಜ್ವಲ್ ಹಲವು ಮಹಿಳೆಯರ ಜತೆಗೆ ಲೈಂಗಿಕ ಸಂಪರ್ಕ ಹೊಂದಿದ್ದರು ಅನ್ನೋ ಆರೋಪಕ್ಕೆ ಸಾಕ್ಷಿಯಂತಿದೆ. ಪ್ರಜ್ವಲ್ ಅವರ ವಿರುದ್ಧ ದಾಖಲಾದ 5 ಪ್ರಕರಣಗಳಿಗೆ ಸಂಬಂಧಪಟ್ಟಂತೆ ಎಸ್ ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಅಲ್ಲದೇ ಈ ಪ್ರಕರಣಗಳಿಗೆ ಸಂಬಂಧಪಟ್ಟಂತೆ ತನಿಖೆ ನಡೆಸುವಾಗ ಈ ವಿಚಾರ ಗೊತ್ತಾಗಿದೆ.
ಅಂದ್ಹಾಗೆ ಸೋಮವಾರ ಪ್ರಜ್ವಲ್ ರೇವಣ್ಣ ಅವರ ತಾಯಿ ಪ್ರಜ್ವಲ್ ರೇವಣ್ಣ ಅವರನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ತಾಯಿ ಭೇಟಿ ಬಳಿಕ ಪ್ರಜ್ವಲ್ ಮಂಕಾಗಿದ್ದಾರೆ ಎನ್ನಲಾಗಿದೆ. ಇತ್ತ ಇಬ್ಬರೂ ಮಕ್ಕಳು ಜೈಲು ಪಾಲಾಗಿರೋದು ಹೆತ್ತವರನ್ನು ಕಂಗೆಡಿಸಿದೆ.
ನಾನು ಪ್ರಜ್ವಲ್ ರೇವಣ್ಣ ಭೇಟಿಗೆ ಹೋಗಲ್ಲ ಎಂದು ಶಾಸಕ ಹೆಚ್ ಡಿ ರೇವಣ್ಣ
ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅರೆಸ್ಟ್ ಆಗಿ ನ್ಯಾಯಾಂಗ ಬಂಧನ ಹಿನ್ನೆಲೆ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಇನ್ನು ಪ್ರಜ್ವಲ್ ರೇವಣ್ಣ ಅವರನ್ನು ತಾಯಿ ಭವಾನಿ ರೇವಣ್ಣ ಅವರು ಜೈಲಿನಲ್ಲಿ ಭೇಟಿಯಾಗಿರುವ ಬಗ್ಗೆ ಹೆಚ್ ಡಿ ರೇವಣ್ಣ ಅವರಲ್ಲಿ ಮಾಧ್ಯಮದವರು ಪ್ರಶ್ನಿಸಿದ ಹೊಳೆನರಸೀಪುರದಲ್ಲಿ ಪ್ರತಿಕ್ರಿಯಿಸಿದ ಅವರು ನಾನು ಪ್ರಜ್ವಲ್ ಭೇಟಿಗೆ ಜೈಲಿಗೆ ಹೋಗಲ್ಲ ಎಂದಿದ್ದಾರೆ.
ಭವಾನಿ ರೇವಣ್ಣ ಪ್ರಜ್ವರ್ ರೇವಣ್ಣ ಅವರ ತಾಯಿಯಾಗಿ ಮಗನನ್ನು ನೋಡಲು ಹೋಗಿದ್ದಾರೆ. ತಾಯಿ ಆಗಿ ಅದು ಅವರ ಕರ್ತವ್ಯ. ಆದರೆ ನಾನು ಜೈಲಿಗೆ ಹೋಗೋದಿಲ್ಲ ಎಂದು ರೇವಣ್ಣ ಹೇಳಿದ್ದಾರೆ. ಅಲ್ಲದೇ ಭವಾನಿ ರೇವಣ್ಣ ಪ್ರಜ್ವಲ್ ರೇವಣ್ಣ ಅವರ ಬಳಿ ಏನು ಮಾತನಾಡಿದ್ದಾರೆ ಅನ್ನೋದು ಗೊತ್ತಿಲ್ಲ. ನಾನು ಮಾತ್ರ ಹೋಗಲ್ಲ. ಹೋದರೆ ನಾನು ಪ್ರಜ್ವಲ್ ಗೆ ಏನೋ ಹೇಳಿ ಕೊಡಲು ಹೋಗಿದ್ದೇನೆ ಅನ್ನೋ ಅರ್ಥ ಹುಟ್ಟಿಕೊಳ್ಳುತ್ತೆ. ಹಾಗಾಗಿ ನಾನು ಹೋಗಲ್ಲ ಎಂದಿದ್ದಾರೆ.
ಇನ್ನು ನಮ್ಮ ಕುಟುಂಬದ ಮೇಲಿರುವ ಕೇಸ್ಗಳ ವಿಚಾರಣೆ ಕೋರ್ಟ್ನಲ್ಲಿದೆ. ಪ್ರಕರಣಗಳು ಕೋರ್ಟ್ನಲ್ಲಿ ಇರುವಾಗ ನಾನು ಮಾತನಾಡುವುದು ಸರಿಯಲ್ಲ. ಹಾಗಾಗಿ ನಾನು ಈಗ ಏನೂ ಮಾತನಾಡಲ್ಲ. ನನಗೆ ದೇವರು, ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಇದೆ. ನಮಗೆ ನ್ಯಾಯ ಸಿಗುವ ವಿಶ್ವಾಸ ಇದೆ ಎಂದು ರೇವಣ್ಣ ಹೇಳಿದ್ದಾರೆ.ನಮಗೆ ಸದ್ಯದ ಮಟ್ಟಿಗೆ ದೇವರೇ ಗತಿ. ಬಿಟ್ಟರೆ ನ್ಯಾಯಾಂಗವೇ ಕಾಪಾಡಬೇಕು. ನನ್ನ ಮೇಲಿನ ಆರೋಪಗಳಿಂದ ಮುಕ್ತನಾಗಿ ಹೊರ ಬರುತ್ತೇವೆ ಎಂದು ರೇವಣ್ಣ ಹೇಳಿದ್ದಾರೆ.