ಬೆಂಗಳೂರು: ಗುತ್ತಿಗೆದಾರನಿಗೆ ಜೀವಬೆದರಿಕೆ ಹಾಕಿ ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಅರೆಸ್ಟ್ ಆಗಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ರಾಜ ರಾಜೇಶ್ವರಿ ನಗರ ಬಿಜೆಪಿ ಶಾಸಕ ಮುನಿರತ್ನ ಬಳಿಕ ಷರತ್ತು ಬದ್ಧ ಜಾಮೀನಿನ ಮೇಲೆ ಹೊರಗೆ ಬಂದಿದ್ದರು. ಹೊರಗೆ ಬರುತ್ತಿದ್ದಂತೆ ಮುನಿರತ್ನ ವಿರುದ್ಧ ಮಹಿಳೆಯೊಬ್ಬರು ದಾಖಲಿಸಿದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅವರನ್ನು ಅರೆಸ್ಟ್ ಮಾಡಿ ಮತ್ತೆ 15 ದಿನಗಳ ನ್ಯಾಯಾಂಗ ಬಂಧನ ಹಿನ್ನೆಲೆ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಯಿತು. ಇದಾದ ಬೆನ್ನಲ್ಲೇ ಹೆಚ್ಚಿನ ತನಿಖೆಗಾಗಿ ಎಸ್ ಐಟಿ ಅಧಿಕಾರಿಗಳು ಮುನಿರತ್ನ ಅವರನ್ನು ವಶಕ್ಕೆ ಪಡೆದಿದ್ದರು. ಸದ್ಯ ಮುನಿರತ್ನ ಎಸ್ ಐಟಿ ವಶದಲ್ಲಿದ್ದಾರೆ. ಇನ್ನು ಹೀಗಿರುವಾಗಲೇ ಸಂತ್ರಸ್ತ ಮಹಿಳೆ ಮುನಿರತ್ನ ವಿರುದ್ಧ ಗಂಭೀರ ಆರೋಪವನ್ನು ಮಾಡಿದ್ದರು. ಮುನಿರತ್ನ ನನ್ನ ಮೇಲೆ ವಿಧಾನಸೌಧ, ವಿಕಾಸಸೌಧ, ಸರ್ಕಾರಿ ವಾಹನದಲ್ಲೂ ಅತ್ಯಾಚಾರವೆಸಗಿದ್ದಾರೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದರು.
ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಇದೀಗ ಎಸ್ ಐಟಿ ಅಧಿಕಾರಿಗಳು ಮುನಿರತ್ನ ಅವರಿಗೆ ಮತ್ತೊಂದು ಶಾಕ್ ಕೊಟ್ಟಿದ್ದಾರೆ. ಇಂದು ಬೆಳಗ್ಗೆ ಶಾಸಕ ಮುನಿರತ್ನ ಅವರ ವೈಯಾಲಿಕಾವಲ್ ನಲ್ಲಿರುವ ಮನೆ ಹಾಗೇ ಅವರ ಕಚೇರಿ ಸೇರಿದಂತೆ ಹಲವು ಕಡೆ ದಾಳಿ ಮಾಡಿದ್ದಾರೆ. ಹಲವು ಕಡೆಗಳಲ್ಲಿ ಏಕಕಾಲಕ್ಕೆ ವಿಶೇಷ ತನಿಖಾ ತಂಡದ ಅಧಿಕಾರಿಗಳು ರೇಡ್ ಮಾಡಿದೆ. ಒಟ್ಟು ಮೂರು ಟೀಂಗಳಲ್ಲಿ ಎಸ್ ಐಟಿ ತಂಡ ಮುನಿರತ್ನ ಮನೆ ಮೇಲೆ ದಾಳಿ ನಡೆಸಿದೆ ಎನ್ನಲಾಗಿದೆ. ಎಸ್ಐಟಿ ಎಸಿಪಿ ಕವಿತಾ ನೇತೃತ್ವದಲ್ಲಿ ದಾಳಿ ನಡೆಸಿದ ಅಧಿಕಾರಿಗಳ ಟೀಂ ಸದ್ಯ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದೆ.
ಜಾಮೀನು ಸಿಕ್ಕಿ ಹೊರಗಡೆ ಬಂದ ಬೆನ್ನಲ್ಲೇ ಮುನಿರತ್ನ ಮತ್ತೆ ಬಂಧನ; ಜಾಮೀನು ಅರ್ಜಿ ಮುಂದೂಡಿಕೆಯಾಗಿ ಜೈಲು ಹಕ್ಕಿಯಾದ ಶಾಸಕ
ಬೆಂಗಳೂರು : ನಿನ್ನೆ ಗುತ್ತಿಗೆದಾರನಿಗೆ ಬೆದರೆಕೆ ಹಾಕಿ ಜಾತಿ ನಿಂದನೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಾಸಕ ಮುನಿರತ್ನಗೆ ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಅದರಂತೆ ಜೈಲಿನಿಂದ ಹೊರ ಬರುತ್ತಿದ್ದಂತೆ ಮಹಿಳೆಯೊಬ್ಬರು ದಾಖಲಿಸಿದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಇನ್ನು ತಮ್ಮ ವಿರುದ್ಧ ದಾಖಲಾದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುನಿರತ್ನ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದರು. ಆದರೆ ಬೆಂಗಳೂರಿನ ವಿಶೇಷ ಜನಪ್ರತಿನಿಧಿಗಳ ಕೋರ್ಟ್ ಮುನಿರತ್ನ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಸೆಪ್ಟೆಂಬರ್ 23 ಕ್ಕೆ ಮುಂದೂಡಿದೆ. ಹಾಗಾಗಿ ಜೈಲಿನಿಂದ ಹೊರ ಬಂದೆ ಅಂತಾ ಕೊಂಚ ಸಮಾಧಾನದಲ್ಲಿದ್ದ ಮುನಿರತ್ನ ಅವರು ಇದೀಗ ಮತ್ತೆ ಜೈಲು ಸೇರುವಂತಾಗಿದೆ.
ರಾಮನಗರ ಜಿಲ್ಲೆಯ ಕಗ್ಗಲಿಪುರ ಠಾಣೆಯಲ್ಲಿ ಸುಮಾರು 40 ವರ್ಷದ ಮಹಿಳೆಯೊಬ್ಬರು 2020 ರಿಂದ 2022ರವರೆಗೆ ಶಾಸಕ ಮುನಿರತ್ನ ಅವರು ನನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ. ಅಲ್ಲದೇ ಬ್ಲ್ಯಾಕ್ಮೇಲ್ ಮಾಡಿದ್ದಾರೆ ಎಂದು ಮಹಿಳೆ ದೂರು ದಾಖಲಿಸಿದ್ದರು. ಆ ದೂರಿನಂತೆ ಇಂದು ಪೋಲೀಸರು ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಅವರನ್ನು ಬಂಧಿಸಿದ್ದಾರೆ.