ಗುಜರಾತ್ ನ ಅಹಮದಾಬಾದ್ ನಲ್ಲಿ ಇಡೀ ದೇಶವೇ ಕಂಡು ಕೇಳರಿಯದ ಭೀಕರ ವಿಮಾನ ದುರಂತ ಸಂಭವಿಸಿದೆ.
ಅಹಮದಾಬಾದ್ ವಿಮಾನ ನಿಲ್ದಾಣದಿಂದ ಲಂಡನ್ ಗೆ ತೆರಳಿದ್ದ ಏರ್ ಇಂಡಿಯಾ ವಿಮಾನ AI-171 ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಮಧ್ಯಾಹ್ನ 1-39ರ ವೇಳೆಗೆ ಮೇಘನಿನಗರ ಬಳಿ ಪತನವಾಗಿದೆ. ಮೇಘಾನಿ ನಗರದ ಬಿಜೆ ವೈದ್ಯಕೀಯ ಕಾಲೇಜು ಯುಜಿ ಹಾಸ್ಟೆಲ್ ಮೆಸ್ ಮೇಲೆ ನೇರವಾಗಿ ಬಿದ್ದಿದೆ. ಮಧ್ಯಾಹ್ನದ ಊಟದ ವೇಳೆಯಾಗಿದ್ದರಿಂದ ಮೆಸ್ ನಲ್ಲಿ ಸಾಕಷ್ಟು ಮೆಡಿಕಲ್ ವಿದ್ಯಾರ್ಥಿಗಳು ಊಟ ಮಾಡುತ್ತಿದ್ದರು ಎನ್ನಲಾಗಿದೆ. ಅವರೆಲ್ಲರೂ ಗಂಬೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗುತ್ತಿದೆ.
ದುರಂತದಲ್ಲಿ ಗುಜರಾತ್ ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸಾವು
ಇನ್ನು ಈ ದುರಂತದ ವೇಳೆ ವಿಮಾನದಲ್ಲಿ ಗುಜರಾತ್ ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಕೂಡ ಪ್ರಯಾಣಿಸುತ್ತಿದ್ದರು. ವಿಜಯ್ ರೂಪಾನಿ ಪತ್ನಿ ಅಂಜಲಿ ಬೆನ್ ಲಂಡನ್ ನಲ್ಲಿರುವ ತಮ್ಮ ಮಗಳ ಮನೆಯಲ್ಲಿ ಕಳೆದ ಆರು ತಿಂಗಳಿಂದ ಇದ್ದರು. ಅವರನ್ನು ಮರಳಿ ಭಾರತಕ್ಕೆ ಕರೆ ತರುವುದಕ್ಕಾಗಿ ವಿಜಯ್ ರೂಪಾನಿ ಇದೇ ವಿಮಾನದಲ್ಲಿ ಲಂಡನ್ ಗೆ ಪ್ರಯಾಣಿಸುತ್ತಿದ್ದರು. ಇದೇ ವೇಳೆ ಭೀಕರ ಅನಾಹುತ ಸಂಭವಿಸಿದೆ.
ವಿಮಾನದಲ್ಲಿದ್ದರು ಕರಾವಳಿ ಮೂಲದ ಕೋ ಪೈಲೆಟ್ ಕ್ಲೈವ್ ಕುಂದರ್
ಅಷ್ಟೇ ಅಲ್ಲದೇ ವಿಮಾನದಲ್ಲಿ ಕರಾವಳಿ ಮೂಲದ ಕ್ಲೈವ್ ಕುಂದರ್ ಎಂಬವರು ಕೋ ಪೈಲೆಟ್ ಆಗಿ ಕೆಲಸ ಮಾಡುತ್ತಿದ್ದರು. ಅವರು ಕೂಡ ಈ ಭೀಕರ ದುರಂತಕ್ಕೆ ಬಲಿಯಾಗಿದ್ದಾರೆ. ಮಾನದಲ್ಲಿ 169 ಭಾರತೀಯರು, 53 ಬ್ರಿಟಿಷ್ ಪ್ರಜೆಗಳು, 7 ಪೋರ್ಚುಗೀಸ್ ಪ್ರಜೆಗಳು ಒಬ್ಬ ಕೆನಡಾದ ಪ್ರಯಾಣಿಕರಿದ್ದರು ಎನ್ನಲಾಗಿದೆ. 1,100 ಗಂಟೆಗಳ ಹಾರಾಟದ ಅನುಭವವನ್ನು ಹೊಂದಿದ್ದ ಕ್ಲೈವ್ ಕುಂದರ್ ಅವರು, 8,200 ಗಂಟೆಗಳಿಗೂ ಹೆಚ್ಚು ಹಾರಾಟದ ಟ್ರೈನೀ ಕ್ಯಾಪ್ಟನ್ ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಅವರ ಜೊತೆ ಕಾರ್ಯನಿರ್ವಹಿಸುತ್ತಿದ್ದರು.
ಇನ್ನು ಘಟನೆಗೆ ಸಂಬಂಧಪಟ್ಟಂತೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ. ಅಹಮದಾಬಾದ್ನಲ್ಲಿ ಸಂಭವಿಸಿದ ವಿಮಾನ ದುರಂತ ನಮ್ಮನ್ನು ದಿಗ್ಭ್ರಮೆಗೊಳಿಸಿದೆ. ಇದು ಪದಗಳಿಗೆ ಮೀರಿದ ಹೃದಯವಿದ್ರಾವಕ ಘಟನೆ. ಸಂತ್ರಸ್ತರಿಗೆ ಅಗತ್ಯ ನೆರವು ಒದಗಿಸುವ ಬಗ್ಗೆ ಸಚಿವರು ಮತ್ತು ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪವಾಡ ಸದೃಶ್ಯವಾಗಿ ಪಾರಾದ ಓರ್ವ ಪ್ರಯಾಣಿಕ
ವಿಮಾನದ ಎಕನಾಮಿ ಕ್ಲಾಸ್ ನ 11 A ಸೀಟ್ ನಲ್ಲಿ ಕುಳಿತು ಪ್ರಯಾಣಿಸುತ್ತಿದ್ದ ರಮೇಶ್ ಕುಮಾರ್ ಎಂಬ ಪ್ರಯಾಣಿಕ ಬಚಾವ್ ಆಗಿದ್ದಾರೆ. ವಿಮಾನ ಟೇಕಾಫ್ ಆದ 30 ಸೆಕೆಂಡ್ ಗಳಲ್ಲಿ ಪತನವಾಗಿದೆ ಎಂದು ಅವರು ಹೇಳಿದ್ದಾರೆ. ನನ್ನ ಸುತ್ತಮುತ್ತ ಸುಟ್ಟಕರಕಲಾದ ಮೃತ ದೇಹಗಳು ಬಿದ್ದಿದ್ದವು, ನನ್ನನ್ನು ಯಾರೋ ಆಸ್ಪತ್ರೆಗೆ ಸೇರಿಸಿದರು . ಹಾಗಾಗಿ ಬದುಕಿ ಉಳಿದೆ ಎಂದು ಅವರು ಹೇಳಿದ್ದಾರೆ.